ಬಲ್ಲಿರೇನಯ್ಯ ಮಾಸ ಪತ್ರಿಕೆಯ ವಿದ್ಯುಕ್ತ ಲೋಕಾರ್ಪಣೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜನವರಿ 31 , 2014
|
ಯಕ್ಷಲೋಕದ ಗೆಳೆಯ ಗೆಳತಿಯರ ಭಾವನೆಗಳ ರಂಗ ಸ್ಥಳ``ವೆಂದೇ ಹೆಜ್ಜೆ ಇಟ್ಟಿರುವ ಬಲ್ಲಿರೇನಯ್ಯದ ಕನಸು ಕಂಡವರು ಕಲಾವಿದ ವರ್ಕಾಡಿ ತಾರಾನಾಥ ಬಲ್ಯಾಯ. ಆಜ್ಞಾಸೋಹಂ ಪ್ರಕಾಶನದ ಮೂಲಕ ಬೆಳ್ಮಣ್ಣಿನಿಂದ ಪ್ರಕಟವಾಗುವ ``ಬಲ್ಲಿರೇನಯ್ಯ`` ಈಗಾಗಲೇ ಪ್ರಾಯೋಗಿಕವಾಗಿ 12 ಸಂಚಿಕೆಗಳನ್ನು ಹೊರತಂದಿದ್ದು, 3,000 ಚಂದಾದಾರರನ್ನು ಹೊಂದಿದೆ.
|
ಬಲ್ಲಿರೇನಯ್ಯದ ಮುಖ್ಯ ಸಂಪಾದಕರು ಕಲಾವಿದ ವರ್ಕಾಡಿ ತಾರಾನಾಥ ಬಲ್ಯಾಯ
|
``ಕೇಳಿ`` ಎಂಬ ಸಂಪಾದಕೀಯ, ಓದುಗರ ಸ್ಪಂದನಕ್ಕಾಗಿಯೇ ಮೀಸಲಾದ ``ಅಹೋ ದಕ್ಕಿತು``, ತಿಂಗಳ ಕಾರ್ಯಕ್ರಮದ ಪಕ್ಷಿನೋಟ ಬೀರುವ ``ಡಂಗುರ`` ಪುಟಗಳು ಅನನ್ಯವಾಗಿವೆ. ಪಾರಂಪರಿಕ ಯಕ್ಷಗಾನಗಳ ಪ್ರದರ್ಶನ,ಅಧ್ಯಯನ ವಿಷಯಗಳ ಬಗ್ಗೆ ವಿಮರ್ಶೆ ಪತ್ರಿಕೆ ಮೂಲಕ ನಡೆಯುತ್ತಿದೆ.
ಯಕ್ಷಗಾನದ ರಂಗಸ್ಥಳದಲ್ಲಿ ಬಣ್ಣ ಬಣ್ಣದ ಯಕ್ಷ ವೇಷಗಳು ಗೆಜ್ಜೆ ಕಟ್ಟಿ ಹೆಜ್ಜೆ ಇಟ್ಟು ಮರೆಯಾದರೂ, ಅವೆಲ್ಲ ವನ್ನು ನೆನಪಿನ ರಂಗಸ್ಥಳದಲ್ಲಿ ಕಟ್ಟಿ ಕೊಡುವ ಯಕ್ಷಗಾನ ಮಾಸಪತ್ರಿಕೆಗಳ ಅಕ್ಷರ ಕೈಂಕರ್ಯ ಸುಲಭದ ಮಾತಲ್ಲ. ನೋಂದಾವಣೆ, ಲೇಖನ-ಚಿತ್ರ ಸಂಗ್ರಹ, ಅಂಚೆ- ಸಂಚಿಕೆಗಳ ವಿತರಣೆ, ಮುದ್ರಾ ರಾಕ್ಷಸನ ಪೀಡೆ ಹೀಗೆ ಹತ್ತು ಹಲವು ನೋವುಗಳ ನಡುವೆಯೂ ಸಕಾಲದಲ್ಲಿ ನಮ್ಮನ್ನು ತಲುಪುವ ಹೊಣೆ ಹೊತ್ತ ಸಂಪಾದಕರದು ಆತ್ಯಂತಿಕ ಸುಖ ನೀಡುವ ಪ್ರಸವ ವೇದನೆ.
`` ಕಲಾವಿದರಲ್ಲಿ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆ,ಅವರಿಗೆ ಪತ್ರಿಕೆ ಬಗ್ಗೆ ಅಭಿರುಚಿ ಮೂಡಿಸುವ ಉದ್ದೇಶವನ್ನೊಂದಿದೆ. ಯಕ್ಷಗಾನ ಕಲಾಭ್ಯಾಸಿಗಳಿಗೆ ಅನುಕೂಲವಾಗುವ ಪ್ರಸಂಗಗಳ ಧಾರಾವಾಹಿಯನ್ನು ಪ್ರಕಟಿಸಲಾಗುವುದು. ತೆಂಕು, ಬಡಗು, ಬಡಾಬಡಗು ಅಲ್ಲದೇ ಕರ್ನಾಟಕದ ಬಯಲಾಟಗಳ ಪರಂಪರೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪತ್ರಿಕೆಯನ್ನು ಹೊರತರಲಾಗಿದೆ`` - ಸಂಪಾದಕ ತಾರಾನಾಥ ವರ್ಕಾಡಿ
ಬಲ್ಲಿರೇನಯ್ಯ ಮಾಸ ಪತ್ರಿಕೆಯ ವಿದ್ಯುಕ್ತ ಲೋಕಾರ್ಪಣೆ, ಇದೇ ಶನಿವಾರ ಬೆ೦ಗಳೂರಿನಲ್ಲಿ ನಡೆಯಲಿದೆ. ಯಕ್ಷಗಾನದ ಸಮಗ್ರ ಮಾಹಿತಿ ಈ ಪತ್ರಿಕೆಯ ಮೂಲಕ ಎಲ್ಲಾ ಕಲಾಭಿಮಾನಿಗಳಿಗೂ ತಲುಪಲಿ ಎ೦ಬುದು “ಬಯಲಾಟ“ದ ಹಾರೈಕೆ.
ಸಮಾರ೦ಭದ ಆಮ೦ತ್ರಣ ಪತ್ರಿಕೆ
|
|
|